ಕರ್ನಾಟಕ ಸಂಗೀತ ಕಚೇರಿಯ ಶ್ರೋತೃವಿದ್ಯಾರ್ಥಿಗಳು ಗಮನಿಸಬೇಕಾದ ಅಂಶಗಳು

(✍️ ಕಾಂಚನ ರೋಹಿಣಿ ಸುಬ್ಬರತ್ನಂ)

Rohini Subbarathnam
ಭಾರತೀಯ ಸಂಗೀತವು ವಿಶ್ವದ ಇತರ ಪ್ರದೇಶಗಳ ಸಂಗೀತಗಳಿಗಿಂತ ಹೆಚ್ಚು ಪ್ರಾಚೀನವೂ ವಿಭಿನ್ನವೂ ಪ್ರಯೋಗಶೀಲತೆಯನ್ನುಳ್ಳದ್ದೂ, ಪರಂಪರೆ ಹಾಗೂ ವ್ಯವಸ್ಥೆಗಳನ್ನುಳ್ಳದ್ದೂ ಆಗಿದ್ದು ವಿಶೇಷತರವಾದುದಾಗಿದೆ. ಇದರಲ್ಲಿ ಕರ್ನಾಟಕ ಹಾಗೂ ಹಿಂದೂಸ್ಥಾನಿ ಎಂಬ ಎರಡು ಪದ್ಧತಿಗಳು ಇದ್ದು, ಇದರಲ್ಲಿ ರಾಜಕೀಯ, ಆಕ್ರಮಣ, ಪರಸ್ಪರ ವಿನಿಮಯ, ಪ್ರಾದೇಶಿಕ ಬಳಕೆ ಮುಂತಾದ ಅನೇಕ ಕಾರಣಗಳಿಂದ ಕರ್ನಾಟಕ ಹಾಗೂ ಹಿಂದೂಸ್ತಾನಿ ಎಂಬ ಬೇಧವನ್ನು ಹೊಂದಿ, ಹಿಂದೂಸ್ಥಾನಿ ಸಂಗೀತ ಪದ್ಧತಿಯು ಮೊಘಲರ ಕಾಲದಿಂದ ಹೆಚ್ಚು ಪ್ರಚಲಿತವಾಗಲುತೊಡಗಿತು. ಆದರೆ ಈ ಎರಡೂ ಪದ್ಧತಿಗಳೂ ಭಾರತೀಯ ಸಂಗೀತದ ಮೂಲಭೂತ ಮುಖ್ಯ ಅಂಶಗಳಾದ ಸ್ವರ, ತಾಳ, ರಾಗ, ಗಮಕ, ಪ್ರಬಂಧ(ನಿಯಮವನ್ನುಳ್ಳ ಹಾಡುಗಳು), ರಸಪ್ರತೀತಿ, ಮನೋಧರ್ಮ ಸಂಗೀತ ಮುಂತಾದ ಹಲವು ವಿಷಯಗಳನ್ನು ಒಳಗೊಂಡಿದ್ದರೂ ಒಳ ವಿಭಾಗಗಳು ಹಾಗೂ ರೀತಿಗಳು, ಶೈಲಿಗಳು, ತಾಳ, ಗಮಕಾನ್ವಯಗಳು, ಉದ್ದೇಶಗಳು – ಇತ್ಯಾದಿಗಳಲ್ಲಿ ಅನೇಕ ವ್ಯತ್ಯಾಸಗಳನ್ನು ಹೊಂದಿ, ಅದರಲ್ಲಿ ಕರ್ನಾಟಕ ಸಂಗೀತವು ಮೂಲ ಭಾರತೀಯ ಸಂಗೀತವನ್ನು ಹಿಂದೂಸ್ಥಾನಿ ಸಂಗೀತಕ್ಕಿಂತ ಹೆಚ್ಚು ಪ್ರಾಚೀನತರವಾಗಿ ಪ್ರತಿನಿಧಿಸುತ್ತದೆ. ಎರಡೂ ಪದ್ಧತಿಗಳಲ್ಲೂ ಮನೋಧರ್ಮ ಪದ್ಧತಿಯಲ್ಲಿ ಪ್ರಬುದ್ಧ, ಪ್ರತಿಭಾವಂತ ಕಲಾವಿದರಿಂದ ಸಂಗೀತ ಕಚೇರಿಗಳು ನಡೆಯುತ್ತಲೇ ಇದ್ದು ತನ್ನದೇ ಆದ ರಸಿಕ ಸಮುಚ್ಚಯವನ್ನು ಹೊಂದಿವೆ.
ಕಚೇರಿ ಎಂಬ ಶಬ್ದವೇ ಬಹುಶಃ ಅನ್ಯಭಾಷೆಯದ್ದು ಹಾಗೂ ಅನ್ಯಸಂಸ್ಕೃತಿಯದು. ಹಿಂದೀ ಉರ್ದುಗಳಲ್ಲಿ ಇದರ ಮೂಲರೂಪ ‘ಕಚ್ ಹರಿ’ ಇದರ ಉಚ್ಚಾರಣೆಯು ಶಿಥಿಲಗೊಂಡದ್ದರಿಂದ ಕನ್ನಡ, ತೆಲುಗು, ತಮಿಳು, ಮಲಯಾಳ ಮುಂತಾದ ದಕ್ಷಿಣ ಭಾರತದ ಪ್ರಾಂತ್ಯಗಳಲ್ಲಿ ಕಚೇರಿ ಶಬ್ದವು ಬಂದಿದೆ. ಕಚೇರಿ ಎಂಬುದು ರಾಜರ ಆಸ್ಥಾನ ಮೊದಲಾದ ರಾಜಕೀಯ ಕಾರ್ಯಗಳು ವ್ಯವಸ್ಥೆಯಿಂದ ನಡೆಯುವಂತಾಗುವ ಸ್ಥಾನಗಳಿಗೆ ಈ ಶಬ್ದವು ಉಪಯೋಗವಾಗಲ್ಪಟ್ಟು ಆನಂತರದಲ್ಲಿ ಸಂಗೀತ ಹಾಗೂ ನಾಟ್ಯಗಳಿಗೆ ಆಡಳಿತದವರಿಂದ ನಡೆಯುವ ವ್ಯವಸ್ಥಿತ ಏರ್ಪಾಡುಗಳಿಗೂ ವಿಸ್ತರಿಸಲ್ಪಟ್ಟಿದೆ. ಸಂಗೀತ ಕಚೇರಿ ಎಂಬ ಶಬ್ದವು ರೂಢಿಗೆ ಬರುವ ಮುನ್ನ ‘ವಿನಿಕೆ’ ಎಂಬ ಹೆಸರಿದ್ದಂತೆ ತೋರುತ್ತದೆ. ತಮಿಳಿನಲ್ಲಿಯೂ ಇದೇ ಅರ್ಥವನ್ನು ಹೊಂದಿದೆ. ನಾಟ್ಯಕಚೇರಿಗೆ ಪೂರ್ವದಲ್ಲಿ ‘ಕೇಳಿಕೆ’ ಎಂಬ ಹೆಸರಿತ್ತು. ಈ ಶಬ್ದದ ಇತಿಹಾಸ ಹೇಗೇ ಇರಲಿ. ಈಗ ‘ಸಂಗೀತ ಕಚೇರಿ’ – ಎಂಬ ಶಬ್ದಕ್ಕೆ – ‘ಸರಿಯಾದ ನಿಯಮ ಕಟ್ಟಲೆಗಳಿಗೆ ಅನುಸಾರವಾಗಿ, ಪೂರ್ವನಿಯೋಜಿತವಾಗಿ ನಡೆಯುವ ಗಾಯನ – ವಾದನಗಳ ಕೂಟ, ಸಮಾರಂಭ, ಏರ್ಪಾಟು’- ಎಂಬ ಅರ್ಥವು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಹಾಗೂ ಕೇರಳಗಳಲ್ಲಿ ರೂಢಿಯಲ್ಲಿದೆ.
ಸಂಗೀತ ಕಚೇರಿಯಲ್ಲಿ ಶ್ರೋತೃಗಳ ಪಾತ್ರ —

ಶ್ರೋತೃಗಳಲ್ಲಿ ಮೂರು ಬಗೆಯಾಗಿ ವಿಂಗಡಿಸಬಹುದು. ಒಂದನೆಯದು ತಾವೇ ಸ್ವತಃ ಉತ್ತಮ ಗಾಯಕ – ವಾದಕ ಕಲಾಕಾರರಾಗಿದ್ದು, ಅಂದಿನ ಕಚೇರಿಯನ್ನು ಪ್ರಸ್ತುತ ಪಡಿಸುವ ಮುಖ್ಯ ಹಾಗೂ ಸಹಕಲಾವಿದರನ್ನು ಪ್ರೋತ್ಸಾಹಿಸಿ, ಕಚೇರಿ ಮಾಡುವವರೆಲ್ಲರ ಮನೋಧರ್ಮದ ಶಕ್ತಿಯನ್ನು ಹೆಚ್ಚಿಸಿ, ತನ್ಮೂಲಕ ಕಚೇರಿಯನ್ನು ಕಳೆಗಟ್ಟಿಸುವವರು. ಇಂತಹವರು ವೇದಿಕೆಯನ್ನೇರುವ ಕಲಾವಿದರುಗಳಿಗೆ ತಾವು ಇನ್ನಷ್ಟು ತಮ್ಮ ವಿದ್ಯೆಯನ್ನು ಊರ್ಜಿತಗೊಳಿಸಿಕೊಂಡು ಹೆಚ್ಚಿಸಿಕೊಳ್ಳಬೇಕೆಂಬ ಜವಾಬ್ದಾರಿಯನ್ನು, ಆಸೆಯನ್ನು, ಸಾಧನೆಯನ್ನು ಹೆಚ್ಚಿಸುವವರು. ಆದರೆ ಇಂತಹ ವಿದ್ವಾಂಸರಾದ ಶ್ರೋತೃಗಳು ಪಕ್ಷಪಾತಗಳಿಲ್ಲದೆ ಮಧ್ಯಸ್ಥರಾಗಿರಬೇಕು. ಸತ್ಯವಾದಿಯೂ, ಸಹೃದಯಿಯೂ ಧರ್ಮಿಷ್ಠರೂ ಕರುಣೆಯುಳ್ಳವರೂ, ವೇದಿಕೆಯನ್ನೇರುವವರಲ್ಲಿ ಸ್ಥಿರಪ್ರೇಮವುಳ್ಳವರೂ, ಪ್ರಸನ್ನವದನವುಳ್ಳವರೂ ಆಗಿದ್ದು ಸದಾ ಕಲಾಬಂಧುತ್ವವನ್ನು ಉಳಿಸಿಕೊಳ್ಳುವವರೂ ಆಗಿರಬೇಕು. ಕಚೇರಿ ನಡೆಯುವಾಗ ಅನ್ಯಮನಸ್ಕರಾಗದೆ ಧನಮದ, ವಿದ್ಯಾಮದವಿಲ್ಲದೆ ನಿಗರ್ವಿಯಾಗಿದ್ದು ವಿನಯದಿಂದ ಇರಬೇಕು. ಹಾಗಿದ್ದಲ್ಲಿ ಮಾತ್ರ ಅದು ವಿದ್ವತ್ಸಭೆ ಎನ್ನಿಸಿಕೊಳ್ಳುತ್ತದೆ. ಕಚೇರಿಯನ್ನು ನೀಡುವ ಕಲಾವಿದರು ಮುಂದೆ ತಾವೂ ಪ್ರಯತ್ನಪೂರ್ವಕವಾಗಿ ಅಭ್ಯಾಸಶೀಲರಾಗುತ್ತಾರೆ, ತಮ್ಮ ಮುಂದಿನ ಕಲಾಕಾರರಿಗೆ ತಾವೂ ಪ್ರೇರಕಶಕ್ತಿಯಾಗಲು ಆದರ್ಶಪ್ರಾಯರಾಗುತ್ತಾರೆ. ಇಂತಹ ಶ್ರೋತೃವರ್ಗದಿಂದ ಕಚೇರಿ ನೀಡುವ ಕಲಾಕಾರರಿಗೆ ತಾವು ಕಷ್ಟಪಟ್ಟು ತಪಸ್ಸಿನಂತೆ ಅಭ್ಯಾಸ ಮಾಡಿದ ಎಂಥಾ ಕ್ಲಿಷ್ಟವಾದ ಸಂಗೀತಸಂಗತಿಗಳನ್ನೂ ಅರಗಿಸಿಕೊಂಡು ಮುಖ್ಯ ಗಾಯಕ – ವಾದಕರಿಗೂ, ಸಹ ವಾದ್ಯದವರಿಗೂ ತಮ್ಮ ಪ್ರತಿಭೆಯನ್ನು ತೋರಿಸಿ ಮೆರೆಸಲು ಅವಕಾಶಗಳಾಗುತ್ತಾರೆ. ಇಂತಹ ಶ್ರೋತೃವರ್ಗದಿಂದ ಕಲೆಯ ಮಟ್ಟವು ಉಳಿಯುತ್ತದೆ, ಬೆಳೆಯುತ್ತದೆ, ಹರಡುತ್ತದೆ. ಆದರೆ ಇಂತಹ ಶ್ರೋತೃವರ್ಗವು ಇಂದು ಬಹಳ ದುರ್ಲಭ.
ಎರಡನೆಯದಾಗಿ, ತಾವೇ ಸ್ವತಃ ಕಲಾಕಾರರಲ್ಲದವರಾದರೂ ಸಂಗೀತವನ್ನು ಚೆನ್ನಾಗಿ ಬಲ್ಲವರಾಗಿದ್ದು, ಗಾಯಕ – ವಾದಕರನ್ನು ಚೆನ್ನಾಗಿ ಪ್ರೋತ್ಸಾಹಿಸಿ, ಆಲಿಸಿ, ಒಳ್ಳೆಯ ಸಂಗತಿಗಳನ್ನು ಮುಕ್ತಕಂಠವಾಗಿ ಮೆಚ್ಚಿ ಆಯಾ ಕಲಾಕಾರರ ಮನೋಧರ್ಮವನ್ನು ಹೆಚ್ಚಿಸಿ ಕಚೇರಿಯು ಕಳೆಗಟ್ಟಲು ಕಾರಣರಾಗುತ್ತಾರೆ. ಉಳಿದಂತೆ ಎಲ್ಲ ಮೊದಲ ವರ್ಗದ ಶ್ರೋತೃವರ್ಗದ ಗುಣಗಳು ಅಪೇಕ್ಷಣೀಯ. ಇಂತಹ ಶ್ರೋತೃವರ್ಗಕ್ಕೆ ಮೇಲ್ಮಟ್ಟದ ವಿದ್ವಾಂಸರಷ್ಟು ಸಂಗೀತದ ವಿದ್ವತ್ತು ಇಲ್ಲವಾದರೂ ಉತ್ತಮ ಶ್ರೋತೃವು ತನ್ನ ಸಂಗೀತರಸಿಕತೆಯಿಂದ ಕಚೇರಿ ಕಳೆಗಟ್ಟಿಸಲು ಕಾರಣರಾಗುತ್ತಾರೆ. ಸಾಮಾನ್ಯವಾಗಿ ಸಭಾಕಚೇರಿಗಳಲ್ಲಿ ಇಂತಹ ಶ್ರೋತೃವರ್ಗವಿರುತ್ತದೆ.

ಮೂರನೆಯ ವರ್ಗದ ಹೆಚ್ಚು ಮಂದಿ ಶ್ರೋತೃಗಳಿಗೆ, ತಮಗೆ ಪ್ರಿಯರಾದ ಕಲಾವಿದರಿಂದ ಆಯಾ ಕಾಲದಲ್ಲಿ ಪ್ರಸಿದ್ಧವಾದ ರಚನೆಗಳನ್ನು ಮಾತ್ರ ಕೇಳುವ ಇಚ್ಛೆ ಇರುತ್ತದಷ್ಟೆ. ಹೆಚ್ಚು ವಾಡಿಕೆಯಲ್ಲಿಲ್ಲದ ಅಪರೂಪದ ರಚನೆಗಳನ್ನು ಕೇಳಲು, ಹಾಗೂ ತಾಳದಲ್ಲಿ ಲೆಕ್ಕಾಚಾರ ಮುಂತಾದ ಕಸರತ್ತುಗಳನ್ನು ಇಂತಹ ಶ್ರೋತೃವರ್ಗವು ಇಚ್ಛಿಸುವುದಿಲ್ಲ. ಮಾತ್ರವಲ್ಲದೆ, ಸಂಗೀತಗಾರರು ತಮ್ಮ ಪ್ರತಿಭೆಯನ್ನು ತೋರಿಸುವಂತಹ ಕ್ಲಿಷ್ಟವಾದ ಭಾಗಗಳನ್ನು ಕಚೇರಿಯಲ್ಲಿ ಪ್ರಸ್ತುತಪಡಿಸಿದರೆ ಅವರಿಗೆ ಇಷ್ಟವಾಗದು. ಇಂತಹ ಶ್ರೋತೃಗಳಿಗೆ ಗಾಯಕ ಗಾಯನಿಯರ /ವಾದಕರ ಪ್ರತಿಭೆಗಿಂತ ಮುಖ್ಯವಾದುದು ಕಂಠದ/ವಾದ್ಯದ ಇಂಪು ಮತ್ತು ಚಮತ್ಕಾರವಿಲ್ಲದ, ಕ್ಲಿಷ್ಟವಿಲ್ಲದ, ಬರೇ ರಂಜನೆ ಮಾತ್ರ ಇರುವಂತಹ ಕಛೇರಿಗಳು ಆಗಬೇಕು. ಅವರಿಗೆ ಸಂಗೀತದ ಅರಿವಿನ ಅವಶ್ಯಕತೆಯೂ, ಆಸೆಯೂ ಇರುವುದಿಲ್ಲ. ಹಾಗೂ ತಮ್ಮ ಕೇಳ್ಮೆಗಾಗಿ ಕೆಲವೇ ಕೆಲವು ಮಂದಿ ಕಲಾಕಾರರದ್ದು ಕೇಳುವಷ್ಟು ಮಾತ್ರ ಆಯ್ಕೆ, ಪ್ರೀತಿ ಹಾಗೂ ತಾಳ್ಮೆಗಳು ಇರುತ್ತವೆ. ಆದರೆ ಕೆಲವು ಸಂಗೀತದ್ವೇಷಿಗಳಿಗಿಂತ ಇಂತಹ ಶ್ರೋತೃವರ್ಗವು ಎಷ್ಟೋ ಉತ್ತಮರು ಎಂದೇ ಹೇಳಬಹುದು.

ಇಂದು ಇರುವ ತೀವ್ರವಾದ ವೇಗದಿಂದ ಉಂಟಾಗುತ್ತಿರುವ ತಂತ್ರಜ್ಞಾನದ ಪ್ರಗತಿ ಹಾಗೂ ಉಪಯೋಗಗಳಿಂದ ಮತ್ತು ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಬದಲಾವಣೆಗಳಿಂದಾಗಿ ಸಂಗೀತಕಚೇರಿಯ ಪದ್ಧತಿಯೂ ಅನೇಕ ವ್ಯತ್ಯಾಸಗಳನ್ನು ಕಾಣುತ್ತಿದೆ. ಕಚೇರಿಯ ಅವಧಿಯು ಕಡಿಮೆಯಾಗುತ್ತಿದೆ. ಪ್ರತ್ಯಕ್ಷ ಶ್ರೋತೃಗಳ ಸಂಖ್ಯೆಯೂ ಕ್ಷೀಣಿಸುತ್ತಿದೆ. ಕಚೇರಿಯ ವಾತಾವರಣ, ಸಂಗೀತಕಚೇರಿ ಮಾಡುವ ಕಲಾಕಾರರ ಹಾಗೂ ಶ್ರೋತೃಗಳ ಧೋರಣೆಗಳೂ, ಮನಃಸ್ಥಿತಿಯೂ ವ್ಯತ್ಯಾಸವಾಗುತ್ತಲೇ ಇವೆ. ಇಂತಹ ಸ್ಥಿತಿಗಳ ಮಧ್ಯೆ, ಕೆಲವು ಶ್ರೋತೃಗಳಿಗೆ ಪ್ರಾಂತೀಯತೆಯ ಮೋಹದಿಂದಾಗಿ, ಬೇರೆ ಪ್ರಾಂತ್ಯಗಳ ಕಲಾವಂತರದ್ದನ್ನು ಕೇಳಬಾರದೆಂಬ ಮಡಿವಂತಿಕೆಯೂ ಇರುತ್ತದೆ. ಇದಂತೂ ಸಂಗೀತಕಲೆಗೆ ಮಾರಕವೇ ಸರಿ.
ವಿದ್ಯಾರ್ಥಿಗಳಾಗಿರುವ ಶ್ರೋತೃವರ್ಗದ ಜವಾಬ್ದಾರಿ ಏನು?

ಶ್ರೋತೃವರ್ಗದಲ್ಲಿ ಇನ್ನೊಂದು ಬಗೆಯದು ವಿದ್ಯಾರ್ಥಿಗಳದು. ಸಂಗೀತವೆಂಬ ಲಲಿತಕಲೆಯ ವಿದ್ಯಾರ್ಜನೆಯು ಶ್ರವಣದಿಂದಲೇ ಆರಂಭವಾಗುವಂತಹುದು ಹಾಗೂ ಬರುವಂತಹುದು. ವಿದ್ಯಾರ್ಥಿಗಳು ಆದಷ್ಟೂ ಸಂಗೀತ ಕಚೇರಿಗಳನ್ನು ಆಲಿಸಲೇಬೇಕು. ಶ್ರೋತೃಗಳಾಗಿ ಕೇಳುವ ಪರಿ ಬೇರೆಯಾದರೆ, ವಿದ್ಯಾರ್ಥಿಗಳಾಗಿ ಕೇಳುವಂತಹ ಜವಾಬ್ದಾರಿ ಹಾಗೂ ರೀತಿ ಬೇರೆಯೇ ಇದೆ. ಅವರ ಆರಂಭದ ಕೇಳುವಿಕೆ ಅವರ ಕಲಿಕೆಯ ವಿಧಾನಕ್ಕೆ ಹಾಗೂ ಅವರವರ ಗುರುಗಳ ಶೈಲಿಗೆ, ಕಲಿಕೆಯ ಹಂತಗಳಿಗೆ ಪೂರಕವಾಗಿಯೇ ಇರಬೇಕು. ಕಚೇರಿಯನ್ನು ಕೇಳುವ ವಿದ್ಯಾರ್ಥಿಗಳ ಹಂತಗಳನ್ನೂ ಕೆಳಕಂಡಂತೆ ನಿಯಮಿಸಿಕೊಳ್ಳಬಹುದು :

1. ಮೊದಲು ಮಕ್ಕಳ ತಾಯಿಯು ತನ್ನ ಶಿಶು/ಭ್ರೂಣವು ಗರ್ಭದಲ್ಲಿದ್ದಾಗಲೇ ಸಂಗೀತ ಸಂಸ್ಕಾರವನ್ನು ನೀಡಬೇಕು. ಆಕೆ ಗದ್ದಲ – ಗಲಾಟೆಗಳಿಲ್ಲದ, ಶ್ರವಣದಿಂದ ಶಾಂತಿ ಸೌಖ್ಯವನ್ನೀವ ಸಂಗೀತವನ್ನು ಕೇಳಬೇಕು. ಆಕೆ ನಿದ್ರಿಸುವಾಗಲೂ ಸುಮಧುರ ಶಾಸ್ತ್ರೀಯ ಸಂಗೀತದ ರೆಕಾರ್ಡ್ ಗಳನ್ನು ಹಾಕಿದರೆ ಬಲು ಉತ್ತಮ. ಆರೇಳು ತಿಂಗಳಿನಿಂದಲೇ ಗರ್ಭಸ್ಥ ಶಿಶುವು ಆಲಿಸುವ ಶಕ್ತಿಯನ್ನು ಪಡೆದುಕೊಂಡಿರುತ್ತದೆ. ಇದನ್ನು ಮಹಾಭಾರತದ ಅಭಿಮನ್ಯು ಹಾಗೂ ಋಷಿಯಾದ ಕಹೋಡ ಹಾಗೂ ಸುಜಾತೆಯ ಪುತ್ರನಾದ ಅಷ್ಟಾವಕ್ರ ಮುಂತಾದ ಪುರಾಣ ಕಥೆಗಳಿಂದಲೂ ತಿಳಿಯಬಹುದು. ಅಲ್ಲದೆ, ಈ ಸಂಗತಿಯು ವೈಜ್ಞಾನಿಕವಾಗಿಯೂ ಸಿದ್ಧವಾಗಿದೆ. ಉತ್ತಮವಾದ ಶಾಂತಿಯುತವಾದ ಹಾಗೂ ಮಧುರವಾದ ಸಂಗೀತವನ್ನು ಕೇಳುವುದರಿಂದ ಮಿದುಳಿನಲ್ಲಿ ಡೋಪಮೈನ್, ಸಿರೊಟೋನಿನ್ ಮತ್ತು ಆಕ್ಸಿಟೋಸಿನ್ ಗಳ ಉತ್ಪಾದನೆಯುಂಟಾಗಿ ಮನವು ಆನಂದಗೊಂಡು, ಶಾಂತಿಯಿಂದ ಇರುತ್ತದೆ. ಮಿದುಳಿನಲ್ಲಿ ಉತ್ಪತ್ತಿಯಾಗುವ ಈ ಹಾರ್ಮೋನುಗಳನ್ನು ಹೆಚ್ಚಾಗಿ “ಸಂತೋಷದ ಹಾರ್ಮೋನುಗಳು” ಎಂದೇ ಕರೆಯಲಾಗುತ್ತದೆ. ಏಕೆಂದರೆ ಅವು ಮಾನವರಿಗೆ ಸಂತೋಷವನ್ನು ಉಂಟುಮಾಡುವುದಲ್ಲದೆ ಸಮಾಜದಲ್ಲಿರುವ ತನ್ನ ಸಹಚರರಲ್ಲಿ ಉತ್ತಮ ಸಂಬಂಧವನ್ನು ಉಂಟುಮಾಡುವಲ್ಲಿ ಹಾಗೂ ಆ ಮನಃಸ್ಥಿತಿಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಡೋಪಮೈನ್ ಸಂತೋಷ ಹಾಗೂ ಅದರ ಪ್ರತಿಫಲನ ಭಾವನೆಗಳೊಂದಿಗೆ ಸಂಬಂಧಿಸಿದರೆ, ಸಿರೊಟೋನಿನ್ ಮನಃಸ್ಥಿತಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಸಂಸ್ಕಾರವು ಶಿಶುವಿಗೆ ಗರ್ಭಸ್ಥವಾಗಿರುವಾಗಲೇ ಆದರೆ ಮುಂದೆ ತಾಯಿಯಿಂದ ಹೊರಬಂದಾನಂತರವೂ ಮಗುವು ಆರೋಗ್ಯವಾಗಿ ಬೆಳೆಯುವುದು ಮಾತ್ರವಲ್ಲದೆ, ಅದು ಬೆಳೆದಂತೆಲ್ಲ ಅಷ್ಟೇ ಶೀಘ್ರವಾಗಿ ಅದಕ್ಕೆ ಸಂಗೀತ ಕಲಿಕೆಯೂ ಆಗುತ್ತದೆ. ಆದುದರಿಂದ ತಾಯಿಗೂ ಹಾಗೂ ಆ ಮನೆಯವರಿಗೂ ಆಕೆಗೆ ಉತ್ತಮವಾದ ಸಂಗೀತಕಚೇರಿಯನ್ನು ಕೇಳಿಸುವ ಜವಾಬ್ದಾರಿ ಇದೆ.

2. ಮಗುವು ಬೆಳೆಯುವ ಹಂತದಲ್ಲೂ ಹಾಲೂಡಿಸುವಾಗ, ನಿದ್ರಿಸುವಾಗ, ಆಟ ಆಡುವಾಗಲೆಲ್ಲ ಮೃದುವಾದ, ಲಯಬದ್ಧವಾದ, ಮಧುರವಾದ ಆದರೆ ಶಾಸ್ತ್ರೀಯವಾದ ಸಂಗೀತ ಕಚೇರಿಗಳ ರೆಕಾರ್ಡಿಂಗ್ ಗಳನ್ನು ಕೇಳಿಸಬೇಕು. ಆಟವಾಡುವಾಗಲೂ ಆ ಮಗುವಿನ ಗಮನವು ಸಂಗೀತದತ್ತ ಇರುತ್ತದೆಂಬುದು ತಿಳಿದ ಸಂಗತಿಯೇ ಆಗಿದೆ. ಮಕ್ಕಳು ಹೇಗೆ ಮನೆಯಲ್ಲಿ ನಡೆಯುವ ಇತರ ಕಲಾಪಗಳನ್ನೂ, ಹಿರಿಯರ ಪರಸ್ಪರ ಸಂಭಾಷಣೆಗಳತ್ತ ಗಮನವನ್ನು ಇಟ್ಟಿರುತ್ತಾರೋ ಅಂತೆಯೇ ಅವರ ಗಮನವು ಸಂಗೀತದತ್ತಲೂ ಇದ್ದೇ ಇರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಗರ್ಭದಿಂದಲೂ ಕೇಳಿದ ಸಂಗೀತವನ್ನು ಮಗುವು ಅತಿ ಶೀಘ್ರದಲ್ಲೇ ಕಲಿಯುತ್ತದೆ. ಬೆಳೆಯುವ ಮಗುವಿನ ಮನಸ್ಸಿನ ಹಾಗೂ ದೈಹಿಕವಾದ ಆರೋಗ್ಯಕ್ಕೂ ಇದು ಒಳಿತು. ಅದಕ್ಕೆ ಕಾರಣವನ್ನು ಈಗಾಗಲೇ ಮೇಲೆ ನೀಡಿದೆ.

3. ಎಳೆಯ ಮಕ್ಕಳನ್ನು ಉತ್ತಮವಾದ ಸಂಗೀತಕಚೇರಿಗಳಿಗೆ ಕರೆದುಕೊಂಡು ಹೋಗುವುದರಿಂದ ಕೂಟದಲ್ಲಿ ಎಂದರೆ ಸಮಾಜದಲ್ಲಿ ಅವರ ನಡತೆಯ ನಿಯಂತ್ರಣವು ಹೇಗಿರಬೇಕೆಂಬ ಪಾಠದೊಂದಿಗೆ ಸಂಗೀತದ ಕಲಿಕೆಯೂ ಒಂದು ಮಟ್ಟದಲ್ಲಿ ನಡೆಯುತ್ತಿರುತ್ತದೆ. ಅನೇಕ ಸಭೆಗಳು ಸಂಗೀತಗಾರರಿಗೆ ಅವರ ಕಚೇರಿಯ ಗಾಯನ – ವಾದನದ ಸಮಯದಲ್ಲಿ ಅವಧಾನವು ತಪ್ಪುತ್ತದೆಂದು ಮಕ್ಕಳ ಬರವನ್ನು ನಿಯಂತ್ರಿಸುತ್ತದೆ. ಆದರೆ ಇದು ಒಂದು ರೀತಿಯಲ್ಲಿ ಮಕ್ಕಳ ಕಲಿಕೆಗೆ ಹಿನ್ನಡೆಯೂ ಆಗುತ್ತದೆ. ಇಂತಹ ಸಂದರ್ಭದಲ್ಲಿ ಮಕ್ಕಳ ಪೋಷಕರಿಗೆ ಸಾಧ್ಯವಾದಷ್ಟೂ ಸಂಗೀತ ಕಚೇರಿಯನ್ನು ಆಲಿಸಲು ಹೇಗೆ ವ್ಯವಸ್ಥೆಯನ್ನು ಮಾಡಬಹುದು ಎಂದು ಸ್ಥಳದ ಅವಕಾಶಗಳಿರುವ ಸಭಾಗಳು ಆಲೋಚಿಸಬಹುದು.

4. ಐದರಿಂದ ಆರನೆಯ ವರ್ಷದಲ್ಲಿ ಹೀಗೆ ಮೇಲಿನಂತೆ ಸಂಗೀತಸಂಸ್ಕಾರವಾದ ಮಕ್ಕಳಿಗೆ ಅವರಿಗೆ ಅಭ್ಯಾಸವರಸೆಗಳೊಂದಿಗೆ ಆಹ್ಲಾದಕರವಾಗಿರುವ ಗೀತ/ಹಾಡು/ಮುದ್ದುಸ್ವಾಮಿ ದೀಕ್ಷಿತರ ನೋಟ್ಟುಸ್ವರಗಳು ಮುಂತಾದ ರಚನೆಗಳನ್ನೊಡಗೂಡಿದ ಸಂಗೀತಪಾಠವನ್ನು ಆರಂಭಿಸಬೇಕು. ಬರೇ ಆಟವಾಡುವ ವಯಸ್ಸಿನ ಇದೇ ಸಮಯದಲ್ಲಿ ಅವರು ಆಟವನ್ನಾಡಿದರೂ ಅದರೊಂದಿಗೇ ಸಣ್ಣ ಧ್ವನಿಯಲ್ಲಿ ಹಾಕಿದ ಒಳ್ಳೆಯ, ಮಧುರವಾದ ಸಂಗೀತದ ಕಚೇರಿಗಳನ್ನು ಕೇಳುತ್ತಲೇ ಇರುತ್ತಾರೆ. ಆಯಾ ಮಕ್ಕಳ ಅಭಿಲಾಷೆಗಳನ್ನು ಗಮನಿಸಿ, ಅವರಿಗೆ ಆಸಕ್ತಿಯಾಗುವ ಶುದ್ಧ ಸಂಗೀತದ ಗಾಯನ – ವಾದನಗಳನ್ನು ಮಕ್ಕಳಿಗೆ ಕೇಳಿಸಬೇಕು. ಇವೆಲ್ಲವೂ ಅವರ ಮುಂದಿನ ಸಂಗೀತಕಲಿಕೆಯ ಸುಮುಖ, ಸುಲಭ ಸಂಗೀತ ಮೆಟ್ಟಲುಗಳು.

5. 10 ನೇ ವಯಸ್ಸಿನಲ್ಲಿ ಮಕ್ಕಳಿಗೆ ಅರಿಯುವ ಹಾಗೂ ಸರಿಯಾಗಿ ಕೇಳುವ ಶಕ್ತಿ ಬೆಳೆದಿರುವುದರಿಂದ ಆಕರ್ಷಕವಾದ, ಮಧುರವಾದ ಹಾಗೂ ಆಳವಾದ ಶಾಸ್ತ್ರೀಯ ಸಂಗೀತವನ್ನು ಕಡ್ಡಾಯವಾಗಿ ಆಗಾಗ್ಗೆ ಕೇಳಿಸುತ್ತಲೇ ಇರುವ ಅವಶ್ಯಕತೆ ಇದೆ. ಇದೀಗ ಅವರು ಗಂಭೀರವಾಗಿ ಒಂಡೆಡೆ ಕುಳಿತು, ಸಾವಧಾನದಿಂದ ಆಲಿಸುವ ಹಂತವನ್ನು ಮುಟ್ಟಿರುತ್ತಾರಾದ್ದರಿಂದ ಸಂಗೀತಕಚೇರಿಯನ್ನು ಕೇಳುವ ಸಮಯದಲ್ಲಿ ಸಣ್ಣಪುಟ್ಟ ವಿವರಗಳನ್ನೂ ತಿಳಿಸುತ್ತಾ, ಗಮನವನ್ನು ಎಲ್ಲೆಲ್ಲಿ ಇಡಬೇಕೆಂದೂ, ಯಾವುವನ್ನು ಅನುಕರಿಸಬೇಕೆಂದೂ ಅಂತೆಯೇ ಸ್ವೀಕರಿಸಬಾರದೆಂದೂ ಹೇಳಬಹುದಾದ ಸಮಯವಿದು. ಅಂತೆಯೇ ಮನೋಧರ್ಮ ಸಂಗೀತದ ಭಾಗಗಳತ್ತಲೂ ಅವರ ಗಮನವನ್ನು ಸೆಳೆಯಲೇ ಬೇಕು. ಪ್ರಬುದ್ಧವಾದ ಸಂಗೀತಾಚಾರ್ಯರುಗಳು ಅವರಿಗೆ ವರ್ಣ ಹಾಗೂ ಕೀರ್ತನೆಗಳ ಪಾಠವು ಆರಂಭವಾಗುವಾಗಲೇ ಆಯಾ ರಾಗಗಳಲ್ಲಿ ಮನೋಧರ್ಮವು ಬೆಳೆಯಲು ಸಹಕಾರಿಯಾಗುವಂತಹ ಸಣ್ಣಪುಟ್ಟ ಅಭ್ಯಾಸವರಸೆಗಳನ್ನು ಅಭ್ಯಾಸ ಮಾಡಿಸಲು ತೊಡಗಿಸಿಬಿಡುತ್ತಾರೆ.

6. ಸಂಗೀತ ಪರೀಕ್ಷೆಯ ಜೂನಿಯರ್ ಹಂತವು ಮುಗಿದಾನಂತರ ವಿದ್ಯಾರ್ಥಿಗಳಿಗೆ ಪ್ರತೀ ಕಚೇರಿಯೂ ಸಂಗೀತ ಕಲಿಕೆಯ ಭಂಡಾರವೇ ಆಗಬೇಕು. ಸಂಗೀತಾಚಾರ್ಯರುಗಳು ತಮ್ಮ ಶಿಷ್ಯರುಗಳನ್ನು ಕನಿಷ್ಠ ವಾರಕ್ಕೆ ಒಂದು ಕಚೇರಿಯನ್ನಾದರೂ ಕಡ್ಡಾಯವಾಗಿ ಕೇಳಲು ವಿಧಿಸಿ, ಪ್ರೇರೇಪಿಸುವುದರೊಂದಿಗೆ ಆಯಾ ಸಂಗೀತಕಚೇರಿಯಲ್ಲಿ ಪ್ರಸ್ತುತಪಡಿಸಿದ ರಾಗ, ತಾಳ, ರಚನೆಗಳು, ವಾಗ್ಗೇಯಕಾರರು, ಇವುಗಳ ಆಯ್ಕೆಯ ಬಗ್ಗೆ, ಸಹವಾದಕರ ಸಹಕಾರ, ಪ್ರತಿಯೊಂದನ್ನೂ ಪ್ರಸ್ತುತ ಪಡಿಸಿದ ರೀತಿ, ಆಯೋಜಕರು ಕಚೇರಿಯನ್ನು ಆಯೋಜಿಸಿದ ರೀತಿ, ಪ್ರೇಕ್ಷಕರ /ಶ್ರೋತೃಗಳ ರಸಿಕತೆ ಹಾಗೂ ಪ್ರತಿಸ್ಪಂದನೆ, ಧ್ವನಿವರ್ಧಕಗಳನ್ನು ಅಳವಡಿಸಿದ ರೀತಿ, ಆಯಾ ಸಭಾಮಂಟಪದ acoustics ಮುಂತಾದುವನ್ನು ಕುರಿತಾಗಿಯೂ, ತಮಗೆ ಇನ್ನೂ ಬೇಕಿತ್ತೆಂದು ಕಾಣುವ ಕಚೇರಿಯ ಭಾಗವನ್ನು ಕುರಿತಾಗಿಯೂ ಪುಟ್ಟ ವಿಮರ್ಶೆಯನ್ನು ಬರೆಯಲು ಪ್ರೇರೇಪಿಸಬಹುದು. ಇದು ಅವರವರು ವೇದಿಕೆಯನ್ನೇರುವಾಗ ತಾವು ಕಚೇರಿಯಲ್ಲಿ ಮಾಡಬೇಕಾದ ಹಾಗೂ, ಅನುಕರಿಸಬೇಕಾದ ರೀತಿಗಳನ್ನು ಹೇಳಿಕೊಡುವುದಲ್ಲದೆ, ಉತ್ತಮ, ಆರೋಗ್ಯಕರ ವಿಮರ್ಶಕರಾಗಿಯೂ ಅವರು ಬೆಳೆಯಲು ಸಹಕಾರಿಯಾಗುತ್ತದೆ.

7. ವಿದ್ವತ್ ಹಂತವನ್ನಂತೂ ತಲುಪಿದ ವಿದ್ಯಾರ್ಥಿಗಳು ವೇದಿಕೆಯಲ್ಲಿ ನಡೆಯುವ ಕಚೇರಿಗಳನ್ನು ತಪ್ಪಿಸುವಂತಿಲ್ಲ. ಪ್ರತಿಯೊಂದು ಕಚೇರಿಯೂ ಅವರ ಕಲಾಜೀವನಕ್ಕೆ ಮುಖ್ಯ ಪಾಠವೂ ಹೆಜ್ಜೆಯೂ ಆಗುತ್ತದೆ. ವೇದಿಕೆಯಲ್ಲಿ ತನ್ನ ಪ್ರತಿಭೆಯನ್ನು ಮೆರೆಸಲೂ, ಕಲಾಜೀವನದಲ್ಲಿ ಕಚೇರಿ ಮಾಡುವುದನ್ನೇ ಜೀವನದ ಉದ್ಯೋಗವನ್ನಾಗಿಯೂ ಮಾಡಿಕೊಳ್ಳಬೇಕೆಂದು ನಿಶ್ಚಯಿಸುವವರು ಕಚೇರಿಯನ್ನು ಕೇಳಲೇ ಬೇಕಾದುದು ಆ ಕಲೆಯ ವೃತ್ತಿಧರ್ಮವೂ ಸಹ ಆಗಿಬಿಡುತ್ತದೆ. ಕರ್ನಾಟಕ ಸಂಗೀತ ಕಚೇರಿಗಳಲ್ಲಿ ಉಪಯೋಗಿಸುವ ಉಪಾಯಗಳು ಎಂತಹವೆಂದರೆ ಸಾಮಾನ್ಯವಾಗಿ ಪಂಡಿತರಿಂದ ಪಾಮರರವರೆಗೂ ಮೆಚ್ಚುಗೆಯಾಗುವಂತಹ, ರಂಜನೆಯಾಗುವಂತಹ ರಚನೆಗಳನ್ನೊಳಗೊಂಡಿರುವುದು ಹಾಗೂ ಅವುಗಳನ್ನು ಅನ್ವಯವಾಗುವ, ಅಳವಡಿಸಿಕೊಳ್ಳುವ ರೀತಿಗಳೂ ಸಹ ವಿಶೇಷವಾದದ್ದು. ಆದ್ದರಿಂದ ಕಚೇರಿಯ ಹಂತವನ್ನು ತಲುಪಿರುವ ವಿದ್ಯಾರ್ಥಿಗಳು ಗಮನಿಸಬೇಕಾದದ್ದೆಂದರೆ ಆರಂಭದಲ್ಲಿ ಕಚೇರಿಯನ್ನು ಜಮಾವಟ್ಟನ್ನಾಗಿ ಮಾಡುವುದರೊಂದಿಗೆ ವಿದ್ವಾಂಸರು ಹೇಗೆ ತಮ್ಮ ಶ್ರೋತೃವರ್ಗವನ್ನು ಅಳೆಯುವ ಸಂದರ್ಭವನ್ನಾಗಿಯೂ ಮಾಡಿಕೊಳ್ಳಲು ಯತ್ನಿಸುತ್ತಾರೆ ಎಂಬುದನ್ನು ಗಮನಿಸಬೇಕು. ಸಾಮಾನ್ಯವಾಗಿ ಕಚೇರಿಯ ಸಮಯಾವಕಾಶವು ಹೆಚ್ಚಿದ್ದಲ್ಲಿ, ಅದು ವಿದ್ವತ್ಸಭೆಯೂ ಆಗಿದ್ದಲ್ಲಿ ಅಟತಾಳವರ್ಣದಿಂದಲೋ ಅಥವಾ ಅಪರೂಪದ ವರ್ಣದಿಂದಲೋ ಅಥವಾ ಆದಿತಾಳದ ವರ್ಣದಿಂದಲೋ ಆರಂಭಿಸಿ, ಚೌಕಾಲ, ಮೇಲ್ಕಾಲ, ಕೀಳ್ಕಾಲಗಳಲ್ಲಿ ಕಾಲಗಳ ವ್ಯತ್ಯಾಸಗಳನ್ನು ಮಾಡುತ್ತ, ತ್ರಿಶ್ರ, ಸಾಧ್ಯವಾದರೆ ಖಂಡನಡೆಗಳಲ್ಲಿ ಪ್ರಸ್ತುತ ಪಡಿಸುತ್ತ ತಮ್ಮ ತಾಳದ ಗಟ್ಟಿಗತನವನ್ನು ತೋರುವುದರೊಂದಿಗೆ ಶ್ರೋತೃಗಳ ಗಮನವನ್ನು ತಮ್ಮೆಡೆಗೆ ಸೆಳೆದುಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಹಾಡುವವರ ಕಂಠವು ಒದಗಿ ಬರುವುದರೊಂದಿಗೆ ಶ್ರೋತೃಗಳನ್ನು ಆಕರ್ಷಿಸುತ್ತದೆ. ವಾದ್ಯಕಾರರಾದರೆ ಅವರ ಕೈಗಳು ನುಡಿಯಲು ಇಡೀ ಕಚೇರಿಯಲ್ಲಿ ಉಪಕರಿಸುತ್ತದೆ. ಕಚೇರಿಯ ಪ್ರತಿಯೊಂದು ಹಂತದಲ್ಲಿಯೂ ಜನರಂಜನೆಯೊಂದಿಗೆ ಪ್ರತಿಭೆಯನ್ನೂ ಹೇಗೆ ಉಪಯೋಗಿಸಿಕೊಳ್ಳಬೇಕು, ತಮ್ಮ ಸಂಪ್ರದಾಯವನ್ನೂ ಪರಂಪರೆಯನ್ನೂ ಪ್ರಕಟಪಡಿಸುವುದರೊಂದಿಗೆ ತನ್ನ ಪ್ರತಿಭೆಯನ್ನೂ ಹೇಗೆ ಮೆರೆಸಬೇಕು ಇತ್ಯಾದಿ ಜವಾಬ್ದಾರಿಗಳು ಕಲಾಕಾರರಿಗೆ ಇರುತ್ತವೆ. ಈ ಕ್ಷೇತ್ರದಲ್ಲೇ ತನ್ನ ಅಸ್ತಿತ್ವವು ಇದೆಯೆಂದು ನಂಬುವ, ಆಶಿಸುವ, ಕೀರ್ತಿಶಾಲಿಗಳಾಗಬೇಕೆಂದು ಬಯಸುವ ವಿದ್ಯಾರ್ಥಿಗಳು ಈ ಹಂತದಲ್ಲಿ ಬಹಳವಾಗಿ ಅಭ್ಯಾಸವನ್ನು, ಸರಿಯಾದ ರೀತಿಯಲ್ಲಿ ಮಾಡಲೇಬೇಕು. ಇಲ್ಲವಾದರೆ ಆ ಆಸೆಯನ್ನು ತ್ಯಜಿಸಬೇಕಷ್ಟೆ. ವಿದ್ವತ್ ಹಂತದ ಪರೀಕ್ಷೆಯಲ್ಲಿ, ನಿಗದಿತ ಕಾಲದಲ್ಲಿ ಸಹವಾದನಗಳೊಂದಿಗೆ ಕಛೇರಿಯನ್ನು ಪ್ರಸ್ತುತ ಪಡಿಸುವ ಭಾಗವೂ ಇದೆಯೆಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅದರ ಉದ್ದೇಶವಾದರೂ ಇದೆ. ರಂಗಕಲೆಗಳ ನಿಜವಾದ ಪರೀಕ್ಷೆಯೆಂದರೆ ವೇದಿಕೆಯೇ ಅಲ್ಲವೇ?
ವೇದಿಕೆಯಲ್ಲಿ ಪ್ರಸ್ತುತಿ ಎಂಬ ಕಲಿಕೆಯಲ್ಲಿ ಮೊದಲು ಗಮನಿಸಬೇಕಾದುದೆಂದರೆ ಕಚೇರಿಯ ಪ್ರತಿಯೊಂದು ರಚನೆಗಳ ಆಯ್ಕೆಯೂ ಸಹ ಪರಸ್ಪರವಾಗಿ ಹೊಂದುವುದರೊಂದಿಗೆ, ಅದು ಕಚೇರಿಯನ್ನು ಹೇಗೆ ಮೆರುಗುಗೊಳಿಸಿ ಯಶಸ್ವಿಗೊಳಿಸುತ್ತದೆ ಎಂಬುದರಿಂದಲೇ ಆರಂಭವಾಗಬೇಕು. ಅದರ ಅನಂತರ ಶ್ರೋತೃಗಳ ಆಲಿಕೆಯ ಶಕ್ತಿ, ಅದಕ್ಕೆ ತಕ್ಕಂತೆ ರಚನೆಗಳ ರಾಗಗಳ ಆಯ್ಕೆ, ಅವುಗಳ ತಾಳ ವೈವಿಧ್ಯಗಳು, ರಚನೆಗಳ ಒಂದೊಂದರ ಗತಿ, ಗತಿಯ ವೇಗ, ರಚನೆಗಳಲ್ಲಿ ಮನೋಧರ್ಮ ಸಂಗೀತವು ಎಲ್ಲೆಲ್ಲಿ ವಿಸ್ತಾರವಾಗಿ ಪ್ರಸ್ತುತಿಯಾಗಬೇಕು, ಅಥವಾ ಕ್ಲುಪ್ತವಾಗಬೇಕು, ಪ್ರಗಲ್ಭವಾದ ಪ್ರಸ್ತುತಿಯಾದಾನಂತರ ಎಲ್ಲಿ ಲಘುವಾಗಿ ರಚನೆಗಳು ಪ್ರಸ್ತುತಿಯಾಗಬೇಕು, ಯಾವ ಯಾವ ಭಾಷೆಗಳಲ್ಲಿ ರಚನೆಗಳು ಶ್ರೋತೃಗಳ ಮನವನ್ನು ಮುಟ್ಟುತ್ತದೆ, ಎಲ್ಲೆಲ್ಲಿ ಲೋಕರೂಢಿಯಲ್ಲಿ ಪ್ರಸಿದ್ಧವಾದ, ಜನಪ್ರಿಯವಾದ ರಚನೆಗಳನ್ನು ಪ್ರಸ್ತುತ ಪಡಿಸಬೇಕು, ಅದರ ನಡುನಡುವಿನಲ್ಲಿ ಅಪರೂಪದ ರಚನೆಗಳನ್ನು ಪ್ರಸ್ತುತ ಪಡಿಸಿದರೆ ಅವು ಹೇಗೆ ಪ್ರಸಕ್ತವಾಗುತ್ತವೆ, ರಂಜನೆಯುಂಟುಮಾಡುತ್ತದೆ, ಶ್ರೋತೃಗಳನ್ನು ಬೆರಗುಗೊಳಿಸುವಂತೆ ಮಾಡುತ್ತದೆ, ಎಂದು ಮುಂತಾಗಿ, ಇತ್ಯಾದಿ ವಿವರಗಳನ್ನು ಹಿರಿಯ, ನುರಿತ, ಹೆಸರಾಂತ ಪ್ರತಿಭಾನ್ವಿತ ಕಲಾವಿದರು ತಮ್ಮ ಕಚೇರಿಗಳಲ್ಲಿ ಉಪಯೋಗಿಸಿಕೊಳ್ಳುವ ಇಂತಹ ಉಪಾಯಗಳನ್ನು ಗಮನಿಸಿ, ವಿದ್ಯಾರ್ಥಿಗಳು ತಾವೂ ಸಹ ಆ ಉಪಾಯಗಳನ್ನು ಅಳವಡಿಸಿಕೊಳ್ಳಲು ಯತ್ನಿಸಬೇಕು. ಕಚೇರಿಯನ್ನು ಕೇಳಿ ಕೇಳಿ, ಗಮನಿಸಿ ಗಮನಿಸಿ ಅದನ್ನೆಲ್ಲ ಅಳವಡಿಸಿಕೊಳ್ಳಲು ಯತ್ನಿಸುವುದರಿಂದ ಉಂಟಾಗುವ ಅನುಭವಗಳೇ ಬಹು ದೊಡ್ಡ ಪಾಠವಾಗುತ್ತದೆ.

ಇನ್ನೂ ಮುಖ್ಯವಾಗಿ ಗಮನಿಸಬೇಕಾದದ್ದೆಂದರೆ, ಮನೋಧರ್ಮ ಸಂಗೀತವನ್ನು ಕಲಾವಿದರುಗಳು ಹೇಗೆ ಸೃಜಿಸುತ್ತಾರೆ ಎಂಬುದು. ಭಾರತೀಯ ಸಂಗೀತದ ಅತಿ ಹಿರಿದಾದ ವೈಶಿಷ್ಟ್ಯವೆಂದರೆ ಅದೇ. ಆದ್ದರಿಂದ, ಮನೋಧರ್ಮ ಕಲ್ಪನೆಯು ಸಾಕಾರಗೊಳ್ಳಲು, ವಿದ್ಯಾರ್ಥಿಗಳು ತಾವು ಹಿಂದೆ ತರಗತಿಗಳಲ್ಲಿ, ಬೇರೆ ಬೇರೆ ರಾಗ – ತಾಳಗಳಲ್ಲಿ ಅಭ್ಯಾಸ ಮಾಡಿದ ವರ್ಣಾಲಂಕಾರಗಳು ಮತ್ತು ತಾನಗಳನ್ನು ಇನ್ನಷ್ಟು ತಾರ ಮಧ್ಯ ಮಂದ್ರಸ್ಥಾಯಿಗಳಲ್ಲಿ ಅಭ್ಯಾಸವನ್ನು ಸ್ವರಗಳಲ್ಲೂ, ಅಕಾರಗಳಲ್ಲೂ ಅಭ್ಯಾಸ ಮಾಡುತ್ತ, ಜಂಟಿ, ದಾಟು, ವಕ್ರ ರೂಪಗಳಲ್ಲಿ ಅಭ್ಯಾಸವರಸೆಗಳನ್ನು ಹಾಡುತ್ತ/ನುಡಿಸುತ್ತ, ತಾವೇ ಹಲವಾರು ಸ್ವರವರ್ಣಾಲಂಕಾರಗಳನ್ನು ಸೃಜಿಸುತ್ತ, ತಾನಗಳನ್ನು ಸೃಜಿಸಬೇಕು. ತಾನವೆಂದರೆ ಈಗಿನ ತಾನವೆಂಬ ಪರಿಭಾಷೆಯಲ್ಲ. ಈಗಿನ ಪರಿಭಾಷೆಯಲ್ಲಿ ತಾನವೆಂದರೆ ರಾಗಾಲಾಪವಾದಾನಂತರ ತಾನಂತ ತಾನಂ.. ಎಂದು, ಇತ್ಯಾದಿ, ಬೇರೆ ಬೇರೆ ಲಯಗಳಲ್ಲಿ, ಗತಿಗಳಲ್ಲಿ ಮನೋಧರ್ಮದಲ್ಲಿ ಪ್ರಸ್ತುತಪಡಿಸುವಂತಹುದು. ಇದು ಕಚೇರಿಗಳಲ್ಲಿ ರಾಗ ತಾನ ಪಲ್ಲವಿಯೆಂಬ ರಚನೆಯಾಗಿ ಪ್ರಸ್ತುತಗೊಳ್ಳುವಂತಹುದು. ಪ್ರಾಚೀನದಲ್ಲಿ ಇದಕ್ಕೆ ಕಟಕ ಎಂಬ ಪರಿಭಾಷೆ ಇತ್ತು. ಆದರೆ, ಇಲ್ಲಿ, ತಾನವೆಂದರೆ ಸ್ವರವಿಸ್ತಾರ. ಒಂದು ಸ್ವರವು ಮುಂದು ಮುಂದಕ್ಕೆ ವಿಸ್ತರಿಸಿ ಮುಂದು ಮುಂದಿನ ಸ್ವರಗಳನ್ನು ಉಂಟುಮಾಡುತ್ತ ಒಂದು ಶ್ರೇಣಿಯನ್ನು ನಿರ್ಮಿಸಿಕೊಳ್ಳುವುದರಿಂದ ತಾನವು ಉಂಟಾಗುತ್ತದೆ. ಇವು ರಾಗಾಲಾಪನೆಯ ಖಂಡಗಳಾಗಿ ಪರಿಣಮಿಸುತ್ತವೆ. ಇದನ್ನು ಈಗಿನ ಪರಿಭಾಷೆಯಂತೆ ಸಂಗತಿಗಳು ಎಂದು ಕರೆಯಬಹುದು. ವರ್ಣ ಎಂದರೆ – ಪ್ರಾಚೀನ ಸಂಗೀತ ಪರಿಭಾಷೆಯಲ್ಲಿ — ಗಾನಕ್ರಿಯೆ. ಎಂದರೆ ಸ್ವರಸಂಚಾರ. ಸ್ವರಗಳು ನಿಂತು ನಿಂತು ನಡೆಯುವುದು, ಏರುವುದು, ಇಳಿಯುವುದು, ಅಥವಾ ಇವುಗಳ ಮಿಶ್ರವಾಗಿರುವುದು ಎಂಬ ನಾಲ್ಕೂ ಬಗೆಗಳಲ್ಲೂ ಸ್ವರಗಳು ಸಂಚರಿಸುವುದು. ಇಂತಹ ವರ್ಣಾಲಂಕಾರಗಳನ್ನು ಅಭ್ಯಾಸ ಮಾಡುವುದರಿಂದ ಸ್ವರಸಂಚಾರದ ವೈಚಿತ್ರ್ಯ, ರಕ್ತಿಲಾಭ, ಸ್ವರ ಜ್ಞಾನ ಮುಂತಾದವು ಸಿದ್ಧಿಸುತ್ತವೆ. ಸರಳೆವರಸೆ (=ಸ್ವರಾಲಿ), ಜಂಟಿವರಸೆ, ದಾಟುವರಸೆ, ತಾಳಾಲಂಕಾರಗಳೆಂದು ಇಂದು ಕರ್ನಾಟಕ ಸಂಗೀತದಲ್ಲಿ ಅಭ್ಯಾಸಗಾನದಲ್ಲಿ ರೂಢಿಯಲ್ಲಿರುವ ಭಾಗಗಳನ್ನೂ ಅಭ್ಯಾಸ ಮಾಡಬೇಕು. ಸುಳಾದಿ ತಾಳಗಳಿಗೆ ಹೊಂದಿಸಿದ ಸ್ವರಗಳೂ ವರ್ಣಾಲಂಕಾರಗಳೇ. ಅಭ್ಯಾಸಿಗಳಿಗೆ ಅವುಗಳ ಅಭ್ಯಾಸದಿಂದ ಅನೇಕ ಪ್ರಯೋಜನಗಳು ಇಂದೂ ದೊರಕುತ್ತಲೇ ಇವೆ, ಮುಂದೂ ಅವು ಅನಿವಾರ್ಯ.

ಕಚೇರಿಯನ್ನು ಕೇಳುವ ಈ ಹಂತದ ವಿದ್ಯಾರ್ಥಿಗಳು ವಿದ್ವಾಂಸರು ರಾಗಾಲಾಪನೆಯನ್ನು ಆಯಾ ರಾಗದ ವಿಸ್ತಾರಕ್ಕೆಂದು ನಿಯಮಿಸಿಕೊಂಡ ಕಾಲಪರಿಮಿತಿಗಳಲ್ಲಿ ಆಲಾಪನೆಗೆಂದು ಯಾವ ಯಾವ ಉಪಾಯಗಳನ್ನು ಮಾಡುತ್ತಾರೆ ಎಂದೂ, ಇಂತಹ ಸಂದರ್ಭಗಳಲ್ಲಿ ಸ್ವರವರ್ಣಾಲಂಕಾರಗಳಿಂದ ಉಂಟಾಗುವ ತಾನಗಳು ಹೇಗೆ ಪ್ರಯುಕ್ತವಾಗುತ್ತವೆ ಎಂಬುದನ್ನೂ ಗಮನಿಸಬೇಕು. ಕಾಲಪರಿಮಿತಿಯಲ್ಲಿ ಪ್ರಸ್ತುತವಾಗಬೇಕಾದ ರಾಗಾಲಾಪನೆ ಭಾಗದಲ್ಲಿ ನೋಡಿದರೆ, ಉದಾಹರಣೆಗೆ ಸಾಮಾನ್ಯವಾಗಿ ಬರೇ ಎರಡು ನಿಮಿಷಗಳಲ್ಲಿ ಹಾಡುವ /ವಾದನ ಮಾಡುವ ರಾಗಗಳನ್ನು ತಾರಸ್ಥಾಯಿಯಿಂದ ಅವರೋಹಣ ಮುಖವಾಗಿ ವೇಗದ ಬಿರ್ಕಾಗಳಿಂದ ಆರಂಭಿಸುವಂತಹುದು. ಅಥವಾ ಅದರ ಅದಲುಬದಲು. ಹಾಗೂ, ಕಚೇರಿಯ ಮುಖ್ಯಭಾಗವಾಗಿ ವಿಸ್ತಾರವಾಗಿ ರಾಗವನ್ನು ಹಾಡಲೆಂದೂ, ಆ ಕೃತಿಯ ಭಾಗವನ್ನು ನೆರವಲು ಮಾಡಲೆಂದೂ ಆಯ್ಕೆ ಮಾಡಿಕೊಂಡ ವಿಳಂಬಕಾಲದ ಕೃತಿಗಳ ಪ್ರಸ್ತುತಿಗೆಂದು ರಾಗಾಲಾಪನೆಯನ್ನು ಮಾಡುವಾಗ ಮಧ್ಯಸ್ಥಾಯಿಯ ಸ್ವರಗಳ ಪೂರ್ವಾಂಗದಲ್ಲಿ ರಾಗಾಲಾಪನೆಯನ್ನು ನಿಧಾನವಾಗಿ ಆರಂಭಿಸುವುದು ಇತ್ಯಾದಿ ಇತ್ಯಾದಿ. ಸ್ವರಪ್ರಸ್ತಾರವಾದರೆ ವಿಳಂಬವಾಗಿ ಹಾಡುವ ಸಂದರ್ಭದಲ್ಲಿ ಮಧ್ಯಮಗತಿಯಲ್ಲಿ ಸ್ವರಪ್ರಸ್ತಾರವು ಆರಂಭವಾದರೆ, ದ್ರುತಗತಿಯಲ್ಲಿ ಹಾಡಿದ ರಚನೆಗಳಿಗೆ ದ್ರುತಗತಿಯಲ್ಲಿಯೇ ಸ್ವರಪ್ರಸ್ತಾರಗಳು ಆಗುವಂತಹುದು. ಇವು ಸ್ವರಾಲಂಕಾರಗಳ ವಿಸ್ತರದಿಂದಲೇ, ಅವುಗಳನ್ನು ಜೋಡಿಸುವಲ್ಲಿ, ಹಂತ ಹಂತವಾಗಿ, ಆಯಾ ರಾಗದ ಬೇರೆ ಬೇರೆ ಸ್ವರಗಳಲ್ಲಿ ನಿಲ್ಲಿಸುತ್ತ, ನಿಲ್ಲಿಸುತ್ತ, ವೈವಿಧ್ಯದಿಂದ ಶೋಭಿಸುವ ಆರೋಹಾವರೋಹ, ದಾಟು, ಜಂಟಿ, ವಕ್ರ ಪ್ರಯೋಗಗಳಲ್ಲಿ ಸ್ವರಗಳನ್ನು ಪ್ರಯೋಗಿಸುವುದು, ಅವುಗಳ ಗಮಕ ಪ್ರಯೋಗಗಳು, ಎಲ್ಲೆಲ್ಲಿ ಅಂಶಸ್ವರಗಳನ್ನು ಸುದೀರ್ಘವಾಗಿ ನಿಲ್ಲಿಸುವುದು ಇತ್ಯಾದಿಗಳು ಮನೋಧರ್ಮ ಕಲ್ಪನೆಯ ಸಂಗೀತದ ತಯಾರಿಗೆ ಗಮನಿಸಿ ಅಳವಡಿಸಿಕೊಳ್ಳಬೇಕಾದುದು ಹಾಗೂ ಅತ್ಯಂತ ಅವಶ್ಯಕವಾದುದು. ರಾಗಾಲಾಪನೆಯೂ, ಸ್ವರಪ್ರಸ್ತಾರವೂ, ನೆರವಲೂ ಮನೋಧರ್ಮದ್ದೇ ಆದರೂ ಸಹ ಅವುಗಳ ಸೃಷ್ಟಿಗೂ ತನ್ನದೇ ಆದ ನಿಯಮದ ಚೌಕಟ್ಟು, ವಿಧ, ರೀತಿಗಳನ್ನು ವಿದ್ವಾಂಸರು ಹೇಗೆ ಅಳವಡಿಸಿ, ಅನುಕರಿಸಿ, ಅನುಸರಿಸುತ್ತಾರೆಂದನ್ನು ಬಹಳ ಮುಖ್ಯವಾಗಿ ಗಮನಿಸಬೇಕು. ಪೂರ್ಣವಾಗಿ ಮನೋಧರ್ಮ ಕಲ್ಪನೆಯ ಸಾರವೇ ಆದರೂ ಸಹ ಕರ್ನಾಟಕ ಸಂಗೀತದ ಪ್ರತಿಯೊಂದು ರಚನೆಯ ಪ್ರಸ್ತುತಿಗೂ ಸಹ ತನ್ನದೇ ಆದ ಚೌಕಟ್ಟು, ರೀತಿ ನೀತಿ ವಿಧಗಳು, ಶೈಲಿಗಳು, ನಿಯಮಬದ್ಧತೆಗಳೂ ಇದ್ದು, ಅವು time tested ಸಹ ಆಗಿರುತ್ತವೆ. ಅವು ಹಲವಾರು ಮೇರು ಕಲಾವಿದರ ಅನುಭವಗಳಿಂದ, ಅತಿಯಾದ ಪ್ರಯತ್ನಗಳಿಂದ, ನೂರಾರು ವರ್ಷಗಳಿಂದ ಸಿದ್ಧವಾಗಿವೆ. ವಿದ್ವಾಂಸರಿಂದ ವಿದ್ವಾಂಸರಿಗೆ ಶೈಲಿಯು ಬದಲಾದರೂ ಮೂಲ ನಿಯಮಗಳು ಸ್ವೇಚ್ಛೆಯಾಗಿ ಪರಿಣಮಿಸದೆ ಹೇಗೆ ಸಂಗೀತದ ಗೌರವವನ್ನು ಕಾಪಾಡುತ್ತದೆ ಎಂದು ವಿದ್ಯಾರ್ಥಿಗಳು ಗಮನಿಸಿದರೆ, ಸಂಗೀತದ ಮಹತ್ತು ಅರಿವಾಗುವುದರೊಂದಿಗೆ ಗೌರವವು ಹೆಚ್ಚಾಗಿ, ಈ ಸಂಪ್ರದಾಯ(ಒಳ್ಳೆಯ gift) ವನ್ನು ಕಾಪಾಡಿಕೊಳ್ಳಬೇಕೆಂಬ ವಿವೇಕವನ್ನು ಮೂಡಿಸುವಲ್ಲಿ ಸಫಲವಾಗುತ್ತದೆ.

ಸಂಗೀತದಲ್ಲಿ ಭಾಷಾಮಾಧ್ಯಮವು ಅನಿವಾರ್ಯವಲ್ಲವಾದರೂ ಸಂಸ್ಕೃತ, ತೆಲುಗು, ಕನ್ನಡ, ತಮಿಳು, ಭಾಷೆಗಳಲ್ಲಿ ರಚನೆಗಳು ಪ್ರಸ್ತುತವಾಗಲ್ಪಡುತ್ತವೆ. ಅಪರೂಪವಾಗಿ ವ್ರಜಭಾಷೆಯ ಭಜನ್ ಗಳು, ಪ್ರಸಿದ್ಧ ಭಾವಗೀತೆಗಳು, ಮರಾಠಿಯ ಅಭಂಗ್ ಗಳು ಕಚೇರಿಯಲ್ಲಿ ಆಯಾ ಶ್ರೋತೃಗಳ ಅಪೇಕ್ಷೆ ಮೇರೆಗೆ ಪ್ರಸ್ತುತಗೊಳ್ಳುತ್ತವೆ. ಬಹಳ ಬಹಳ ಅಪರೂಪವಾಗಿ ಮಲಯಾಳ ಭಾಷೆಯ ರಚನೆಗಳೂ ಪ್ರಸ್ತುತಗೊಳ್ಳುತ್ತವೆ ಎಂಬುದನ್ನು ಗಮನಿಸಿದರೆ, ಶ್ರೋತೃಗಳ ರಂಜನೆಗಾಗಿ ವಿದ್ಯಾರ್ಥಿಗಳು ಆಯಾಯಾ ಭಾಷೆಗಳ ರಚನೆಗಳನ್ನು ಕಡ್ಡಾಯವಾಗಿ ಕಲಿಯಬೇಕು. ಜೊತೆಗೆ ಅದರ ರಂಜನೆಯ ಮೌಲ್ಯವು ಹೆಚ್ಚಬೇಕಾದರೆ ಪ್ರತಿ ರಚನೆಗಳ ಪ್ರತಿಪದಾರ್ಥಗಳನ್ನು ಅರಿತುಕೊಂಡು, ಧ್ವನಿಕಾಕುಗಳಿಂದ, ಗಮಕಗಳಿಂದ, ಧ್ವನಿಯ /ಶಾರೀರದ dynamics ಗಳಿಂದ ಅವು ಶ್ರೋತೃಗಳ ಹೃದಯವನ್ನು ಮುಟ್ಟಲು ಸಫಲವಾಗುವಂತೆ ಪ್ರಸ್ತುತಗೊಳಿಸಲೇ ಬೇಕು. ಇದಕ್ಕೆ ಮಹತ್ತಾದ ಉದಾಹರಣೆಯೆಂದರೆ ಭಾರತರತ್ನ ಎಂ. ಎಸ್. ಸುಬ್ಬುಲಕ್ಷ್ಮೀಯವರು. ಆಕೆ ಭಾರತದ ಯಾವುದೇ ಪ್ರಾಂತ್ಯದ ಭಾಷೆಯದ್ದೇ ಆಗಲಿ, ಪ್ರತಿಯೊಂದು ಭಾಷೆಯ ರಚನೆಗಳ ಉಚ್ಚಾರಗಳನ್ನೂ ಆಯಾ ಭಾಷೆಗಳಿಗೆ ತಕ್ಕಂತೆಯೇ, ಅವುಗಳ ಅರ್ಥಗಳಿಗೆ ತಕ್ಕಂತೆಯೇ ಉಚ್ಚಾರವನ್ನು ಮಾಡುತ್ತ, ಪದಚ್ಛೇದಗಳನ್ನು ಮಾಡುತ್ತ ಹಾಡುತ್ತಿದ್ದರು.

ಇನ್ನೊಂದು ಮುಖ್ಯವಾದ ವಿಷಯವೆಂದರೆ ಮುಖ್ಯ ಕಲಾವಿದರಿಗೆ ಸಹಕಲಾವಿದರೊಂದಿಗಿನ ಸಂಗೀತ ದಾಂಪತ್ಯ. ಸಹಕಲಾವಿದರಿಗೂ ಮೇಲೆ ಹೇಳಿದ ಮನೋಧರ್ಮ ಸಂಗೀತದ ಎಲ್ಲ ಅಂಶಗಳೂ ಸೇರಲೇ ಬೇಕಾಗಿದೆ. ಸಹಕಲಾವಿದರಿಗೆ ಹೆಚ್ಚಿನ ಕಚೇರಿಗಳಲ್ಲಿ ಮುಖ್ಯಕಲಾವಿದರು ಪ್ರಸ್ತುತ ಪಡಿಸುವ ರಚನೆಗಳೂ ರಾಗಗಳೂ ತಾಳಗಳ ಲೆಕ್ಕಾಚಾರಗಳು ಗೊತ್ತಿಲ್ಲದಿದ್ದರೂ ಆಯಾ ರಾಗಗಳನ್ನು ಆಯಾ ಕ್ಷಣಗಳಲ್ಲಿಯೇ ನುಡಿಸುವುದಾಗಲಿ, ಮತ್ತು ಲೆಕ್ಕಚಾರಗಳನ್ನು ವಾದನ ಮಾಡುವುದಾಗಲಿ ಮಾಡುತ್ತ ಯಶಸ್ವಿಯಾಗಿ ನಿರ್ವಹಿಸುವಂತಹ ನಿರಂತರ ಪರೀಕ್ಷೆ ಇದ್ದೇ ಇರುತ್ತದೆ. ತಂತೀ ವಾದ್ಯದವರಿಗೆ ಹಾಡುಗಾರಿಕೆಯಲ್ಲಿ ಮಾಡುವಂತಹ ಅಭ್ಯಾಸವರಸೆಗಳನ್ನು ಮಾಡುವ ಅವಶ್ಯಕತೆ ಇದ್ದರೆ, ಲಯವಾದನದವರಿಗೆ ಆ ಸಂಗೀತ ಸ್ವರಗಳ ಬದಲು ಪಾಟಾಕ್ಷರಗಳದು ಅದೇ ರೀತಿಯಲ್ಲಿ ವೈವಿಧ್ಯಮಯ ಲಯವರ್ಣಾಲಂಕಾರಗಳಲ್ಲಿ ಲೆಕ್ಕಾಚಾರ ಪಾಟಾಕ್ಷರಗಳು ಅಭ್ಯಾಸವಾಗಬೇಕು. ಹೀಗೆ ವೇದಿಕೆಯಲ್ಲಿ ಒಬ್ಬರಿಗೊಬ್ಬರು ನೀಡುವ ಸಹಕಾರದೊಂದಿಗೆ, ಕಚೇರಿಯನ್ನು ಕಳೆಗಟ್ಟಿಸುವ ಜವಾಬ್ದಾರಿ ಇದೆ. ಕೆಲವೊಮ್ಮೆ ಸಹಕಲಾವಿದರಿಗೆ ಮುಖ್ಯ ಕಲಾವಿದರನ್ನು ಮೀರಿ ಹೋಗುವಷ್ಟು ವಿದ್ವತ್ ಇದ್ದರೂ ಸಭಾವೇದಿಕೆಯ ಮರ್ಯಾದೆಯ ನಿಯಮದಂತೆ ಅವರು ಮೀರಿ ಹೋಗುವುದಿಲ್ಲ. ಆದರೂ ಅವರಿಗೆಂದೇ ನಿಯಮಿತವಾದ ಸಂಗೀತಸಂದರ್ಭಗಳಲ್ಲಿ ಅವರ ಮಹಾನ್ ಪ್ರತಿಭೆಯನ್ನೂ ವಿದ್ವತ್ತನ್ನೂ ತೋರಿಸಲು ಅವಕಾಶವಿರುತ್ತದಾದರೂ, ಅಲ್ಲೂ ಅವರು ನಿಯಮಗಳನ್ನು ಮೀರದೆ ತಮ್ಮ ಸಹೃದಯತೆಯ ಹಾಗೂ ಸಭಾ ಮರ್ಯಾದೆಯ ದೊಡ್ಡತನವನ್ನೇ ಮೆರೆಯುತ್ತಾರೆ. ಇದನ್ನು ವಿದ್ಯಾರ್ಥಿಗಳು ಗಮನಿಸಬೇಕು, ಪಾಲಿಸಬೇಕು. ಕಚೇರಿಯು ಪ್ರತಿಭಾ ವಿನಿಮಯದ ಭೂಮಿಕೆಯಾಗಬೇಕು. ಜೊತೆಗೆ, ವೇದಿಕೆಯು ಸಂಗೀತಕ್ಕೆ ಯುದ್ಧಭೂಮಿಯಾಗದೆ, ರಸಾಮೃತವನ್ನೇ ಊಡಿಸುವ ರಸಾಯನವಾಗಬೇಕಾದರೆ ಏನೆಲ್ಲ ಉಪಾಯವನ್ನು ಹಿರಿಯ ಕಲಾವಿದರು ಮಾಡುತ್ತಾರೆಂಬುದೂ ವಿದ್ಯಾರ್ಥಿಗಳ ಗಮನದಲ್ಲಿರಬೇಕು, ಅದನ್ನು ಪಾಲಿಸಬೇಕು.
ಕರ್ನಾಟಕ ಸಂಗೀತ ಕಚೇರಿಯನ್ನು ಕೇಳುವುದೆಂದರೆ ಅದೊಂದು ವಿಶಿಷ್ಟ ಅನುಭವ, ಅನುಭಾವ, ಅನುಭೂತಿಯಾಗಬೇಕೆಂದು ಸಂಗೀತದ ವಿದ್ಯಾರ್ಥಿಗಳು ತಾವೂ ಪ್ರಯತ್ನಿಸಬೇಕು. ಪ್ರತೀ ಕಚೇರಿಯು ರಸೋತ್ಪತ್ತಿಯ, ಆನಂದದ ಗಟ್ಟಿಗಳಾಗಲೇ ಬೇಕೆಂದೂ, ಆರ್ಷೇಯವಾದ ನಮ್ಮ ಭಾರತೀಯ ಸಂಗೀತವು ಆಧ್ಯಾತ್ಮಿಕ ಸಾಧನೆಗೆ ಹಾದಿಯಾಗಬೇಕೆಂದು ಯತ್ನಿಸಬೇಕು. ಆಧ್ಯಾತ್ಮಿಕತೆಯೂ ಸಂಗೀತ ಪ್ರಸ್ತುತಿಯಲ್ಲಿ ಭಾವವನ್ನೂ ತನ್ಮೂಲಕ ರಸೋತ್ಪತ್ತಿಯನ್ನೂ ಉಂಟು ಮಾಡುವ ಸಾಧನವೆಂದೂ ಅರಿತು, ಅದರ ಸಾಧನೆಯತ್ತಲೇ ಹೆಚ್ಚು ಹೆಚ್ಚು ಗಮನವನ್ನಿರಿಸಿ, ಸಂಗೀತ ಸಾಧನೆಯನ್ನು ಮಾಡಬೇಕು. ನಾದದಿಂದಲೇ ಜಗತ್ತು ಉಂಟಾಗಿದೆಯೆಂದು ಮಹಾನ್ ಶಾಸ್ತ್ರಕಾರರಾದ ಮತಂಗಮುನಿ, ಶಾರ್ಙ್ಗದೇವ ಮುಂತಾದವರ ಉಕ್ತಿ. ಸಂಗೀತವು ನಾದಯೋಗ. ನಾದದ ಉಪಾಸನೆಯೇ ಭಾರತೀಯತೆ ಹಾಗೂ ಅದರ ಅಸ್ಮಿತೆ. ಅದು ಕರ್ನಾಟಕಸಂಗೀತದ ಮೂಲಕವೂ ವಿಶ್ವದ ಎಲ್ಲೆಡೆ ಪಸರಿಸಬೇಕು.